*ಗಾಂಧಿ ಪುಣ್ಯತಿಥಿ ಆಚರಣೆ; ವಾರ್ತಾ ಮತ್ತು ಆರೋಗ್ಯ ಇಲಾಖೆ ಪ್ರಕಟಣೆಗಳ ಬಿಡುಗಡೆ*
*ಗಾಂಧೀ ತ್ತತ್ವಗಳು ನಮ್ಮ ಜೀವನದ ನಿತ್ಯ ಸತ್ಯಗಳು; ಗಾಂಧೀಜಿ ಅವರ ಬದುಕಿನ ರೀತಿ ನಮ್ಮ ಸಮಸ್ಯೆಗಳಿಗೆ ಪರಿಹಾರ: ಜಿಲ್ಲಾಧಿಕಾರಿ ದಿವ್ಯ ಪ್ರಭು*
ಧಾರವಾಡ (ಕರ್ನಾಟಕ ವಾರ್ತೆ) ಜ.30: ಮಹಾತ್ಮ ಗಾಂಧೀಜಿ ಅವರು ತಮ್ಮ ಜೀವನದುದ್ದಕ್ಕೂ ಬೋಧಿಸಿದ ತ್ತತ್ವಗಳು ನಮ್ಮ ಜೀವನದ ನಿತ್ಯ ಸತ್ಯಗಳಾಗಿವೆ. ಅವರ ಬದುಕಿನ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡರೆ ಪರಸ್ಪರ ಪ್ರೀತಿ, ವಿಶ್ವಾಸ, ಭಾವೈಕ್ಯತೆ, ಸಾಮರಸ್ಯ ಮೂಡುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತವಾಗಿ ಮಹಾತ್ಮ ಗಾಂಧಿ ಅವರ ಪುಣ್ಯತಿಥಿ ನಿಮಿತ್ತ
ಆಯೋಜಿಸಿದ್ದ ಹುತಾತ್ಮರ ದಿನಾಚರಣೆ ಹಾಗೂ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಚಾಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಮಹಾತ್ಮ ಗಾಂಧೀಜಿ ಅವರು ಯಾವುದೇ ಉಪದೇಶ ಕೊಡುವ ಮೊದಲು ಸ್ವತಃ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದರು. ಅವರ ನಡೆ, ನುಡಿ ಒಂದಾಗಿತ್ತು. ಅವರ ಸಾರ್ವಜನಿಕ ಜೀವನ ಇತರರಿಗೆ ಮಾದರಿ ಆಗಿತ್ತು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಗಾಂಧೀಜಿ ಅವರ ಬದುಕಿನ ರೀತಿ ಅವರನ್ನು ವಿಶ್ವ ನಾಯಕರನ್ನಾಗಿ ಮಾಡಿತು. ಇಂದಿನ ಅನೇಕ ಸಾಮಾಜಿಕ ಪಿಡುಗಗಳ ಬಗ್ಗೆ ಅಂದೇ ಮಹಾತ್ಮ ಗಾಂಧಿ ಅವರು ಹೋರಾಟ ಆರಂಭಿಸಿದ್ದರು.ಸಮಾಜದ ಎಲ್ಲ ವರ್ಗಗಳಲ್ಲಿ ಜಾತಿ, ಧರ್ಮ, ಲಿಂಗ, ವಯಸ್ಸು ಬೇಧವಿಲ್ಲದೆ ಸಮಾನತೆ ಕಾಣಬೇಕೆಂಬುದು ಅವರ ಆಶಯ ಮತ್ತು ನಿಲುವು ಆಗಿತ್ತು ಎಂದರು.
ಗಾಂಧೀಜಿ ಅವರದು ಸಮಗ್ರ ಮತ್ತು ಪರಿಪೂರ್ಣ ವ್ಯಕ್ತಿತ್ವ ಆಗಿತ್ತು. ಆಡು ಮುಟ್ಟದ ಸೋಪ್ಪಿಲ್ಲ ಅನ್ನುವಂತೆ ಮಹಾತ್ಮ ಗಾಂಧೀಜಿ ಅವರು ಸಮಾಜ ಸುಧಾರಕರಾಗಿ, ಶ್ರೇಷ್ಠ ಬರಹಗಾರರಾಗಿ, ಪತ್ರಕರ್ತರಾಗಿ, ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸಂಘಟಕಾರಾಗಿ, ರಾಜಕೀಯ ತಜ್ಞರಾಗಿ, ಮಹಿಳೆ-ಮಕ್ಕಳು-ವಯೋವೃದ್ಧರ ಹಕ್ಕುಗಳ ರಕ್ಷಕರಾಗಿ ಹೀಗೆ ಸಾಮಾಜಿಕ ಬದುಕಿನಲ್ಲಿ ಬರುವ ಪ್ರತಿಯೊಬ್ಬರ ಹಕ್ಕು, ಸುಧಾರಣೆ ನತ್ತು ಶಯೊಅಭಿವೃದ್ಧಿಗಾಗಿ ಎಲ್ಲ ಕ್ಷೇತ್ರಗಳಲ್ಲಿ ಶ್ರಮಿಸಿದ್ದಾರೆ. ಇಂತಹ ಎಲ್ಲ ಮಹನೀಯರ ತ್ಯಾಗ, ಬಲಿದಾನ, ಹೊರಾಟಗಳಿಂದಾಗಿ ನಮ್ಮ ದೇಶ ಸ್ವಾತಂತ್ರ್ಯ ಗಳಿಸಿದೆ ಎಂದು ಅವರು ಹೇಳಿದರು.
ಕುಷ್ಠರೋಗ ಮುಕ್ತ ರಾಷ್ಟ್ರ ನಿರ್ಮಾಣ ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು. ಅವರು ಆಶ್ರಮದಲ್ಲಿ ಕುಷ್ಠರೋಗಿಗಳ ಆರೈಕೆ ಸಹ ಮಾಡುತ್ತಿದ್ದರು. ಅವರ ಪುಣ್ಯತಿಥಿ ಅಂಗವಾಗಿ ಆರೋಗ್ಯ ಇಲಾಖೆ ಜಿಲ್ಲೆಯಾದ್ಯಂತ ಇಂದಿನಿಂದ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 65 ಜನ ಕುಷ್ಠರೋಗಿಗಳನ್ನು ಗುರುತಿಸಲಾಗಿದ್ದು, ಅಗತ್ಯವಿರುವ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಸಾರ್ವಜನಿಕರ ಜಾಗೃತಿಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆ ಗಾಂಧಿ ಭಾರತ ಮರು ನಿರ್ಮಾಣ ಪುಸ್ತಕವನ್ನು ಮತ್ತು ಆರೋಗ್ಯ ಇಲಾಖೆ ಪ್ರಕಟಿಸಿರುವ ಕುಷ್ಠರೋಗ ಜಾಗೃತಿ ಬಿತ್ತಿಪತ್ರಗಳನ್ನು ಬಿಡುಗಡೆ ಮಾಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಎಸ್.ಬಿ.ಕಳಸೂರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಆರ್.ಪಾತ್ರೋಟ ಅವರು ಕಾರ್ಯಕ್ರಮ ನಿರೂಪಿಸಿದರು. ಆರ್.ಸಿ.ಎಚ್.ಓ ಡಾ.ಸುಜಾತಾ ಹಸವೀಮಠ ವಂದಿಸಿದರು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿ ಡಾ.ಎಸ್.ಎಂ.ಹಿರೇಮಠ, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ಸಿಬ್ಬಂದಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿಗಳು ಭಾಗವಹಿಸಿದ್ದರು.
*********